ಮಟ ಮಟ ಮಧ್ಯಾಹ್ನ... ಗಾಂಧೀ ಜಯಂತಿ.. ಒಂದಷ್ಟು ಸಾಮಾನುಗಳನ್ನ ತರೋದಿತ್ತು. ಫುಡ್ ವರ್ಲ್ಡ್ ಗೆ ಹೋದ್ರೆ ಬೇಗ ಎಲ್ಲ ಸಿಗುತ್ತೆ ಅಂತ ಹೋದೆ! ಅಲ್ಲಿ ಪ್ಯಾಕೆಟ್ ಎಳನೀರು ಸಿಗುತ್ತೆ, ನ್ಯಾಚುರಲ್ ಕಾಯಿ ಸಮೇತ ಎಳನೀರು - ಉಹುಃ!
entry ಕೊಟ್ಟ ತಕ್ಷಣ ಕಂಡಿದ್ದು - "No meat and liquors will be sold on thursday on occasion of Gandhi Jayanthi" - !!!!!!!
ತಲೇಲಿ ಏನೇನೋ ವಿಷಯಗಳು ಓಡಾಡ್ತಾ ಇರ್ವಾಗ, ರೇಡಿಯೋದಲ್ಲಿ ದೇಶ ಭಕ್ತಿ ಗೀತೆಗಳು.. hmm.. ಇವೆಲ್ಲ ಒಂದು ದಿನದ ಆಚರಣೆಗಳು, ಆ ದಿನ ಮುಗಿದ ನಂತರ ಅವುದರ ಸುಳಿ ಕೂಡ ಇರೋಲ್ಲ.. ರೇಡಿಯೋ ಹಾಕಿದ ಒಡನೆ ಪ್ರಸಾರವಾಗೋದು- "ಒಮ್ಮೆ ನೀ ನಕ್ಕರೇ.. ನಾನು ತುಸು ನಾಚುವೆ.." ಅಂತ ಹುಡುಗ ಹಾಡೋ ಹಾಡು.. ಇಲ್ಲ ಅಂದ್ರೆ "ಮಿನ ಮಿನ ಮಿನ ಮಿನ ಮೀನಾಕ್ಷಿ, ಪಟ ಪಟ ಪಟ ಪಟ ಪಂಚರಂಗಿ ಬಾರೆ.. ಐತಲಕಡಿ..." .... .... ಇದೆಲ್ಲ ತಲೇಲಿ ಬಂದು ಹೋಗ್ತಾ ಇತ್ತು!
ಬೇಗ ತಗೋಳೋದೆಲ್ಲಾ ತಗೊಂಡು, ಅಲ್ಲಿಂದ ರಯ್ಯ!!
ಎಳನೀರಿಗೆ ಹೋಗಬೇಕಲ್ಲಾ..!! hmm.. rate ಜಾಸ್ತಿ ಹೇಳಿದ್ರೆ 'ಕಮ್ಮಿ ಮಾಡಿಪಾ' ಅಂತ ಕೇಳೋ ಜಾಯಮಾನ ಎಂಜಿನಿಯರ್ ಗಳದಲ್ಲ !!! ಆದರೂ ಒಮ್ಮೊಮ್ಮೆ ಕೇಳೋ ಬುದ್ಧಿ ಇದೆ - ತುಂಬ ನಖರ ಗಿಖರ ಉದ್ಧಟತನ ತೋರಿಸೋರ್ ಹತ್ರ!
ಪಾಪ ತುಂಬ ಕಷ್ಟ ಅನ್ಸಿದ್ರೆ, ಅವ್ರು ಎಷ್ಟ್ ಹೇಳ್ತಾರೋ ಅಷ್ಟು ಕೊಟ್ಟಿ ಬಿಡೋದು! ಇನ್ನು ವಯಸ್ಸಾದೋರ್ನ ಕಂಡರಂತೂ ಜಾಸ್ತಿನೇ ಕೊಟ್ಟಿಬರೋ ಬುದ್ಧಿ ಇದೆ!
ಗಾಡಿ ಇನ್ನೇನು ತಿರುಗಿಸ ಬೇಕು, ಒಂದು ಎಳನೀರಿನ ಗಾಡಿ ಕಣ್ಣಿಗೆ ಬಿತ್ತು. ಗಾಡಿ ನಿಲ್ಲಿಸಿ, 'ಎರಡ್ ಪಾರ್ಸೆಲ್ ಮಾಡಿ' ಅಂದೆ. ಕಾಯಿ ಕೊಚ್ಚಿ ಕೊಡುವಾಗ ಅವರ ಮುಗ್ಧತನ ಎದ್ದು ಕಾಣುತ್ತಿತ್ತು! ಮೃದು ಸ್ವಭಾವ! ಹುಡುಗೀರನ್ನ ಕಂಡ್ರೆ ಮೇಲಿಂದ ಕೆಳಗೆ ನೋಡುವ ಕೆಟ್ಟ ಕಣ್ಣುಗಳು ಇರಲಿಲ್ಲ... ತುಂಬಾ ಗೌರವ ಬಂತು ಅವರ ಮೇಲೆ!! "ಮುಗ್ಧ" ಅಂತ ಅವರನ್ನ ಕರಿಯೋಕೆ ಇದೂ ಒಂದು ಕಾರಣ!!
ಮೊಗದಲ್ಲಿ ಒಂದು ಸಣ್ಣ ನಗು.. ಬಿಸಿಲು ಕಾರುತ್ತಿದ್ದರೂ 'complaining tone' ಕಾಣಲಿಲ್ಲ! ಇವರಿಂದ ಅದೆಷ್ಟು ಕಲಿಯೋದಿದೆ ಅನ್ಕೊತಾ ಇದ್ದೆ!!
ಬಿಸಿಲೂ ಚಳಿ ಅನ್ನದೆ, ಬಂದವರಿಗೆ ತಂಪು ಪೇಯ ಕೊಡುವ ಜೀವಗಳು! "ಅವರು ಇರೋದೇ ಅದಕ್ಕೆ" ಅಂತ ಮಾತಾಡೋರು ಇದಾರೆ.. ಕಾಣದ ವಿಷಯ ಒಂದಿದೆ.. ದಿನಾ ಬೆಳಿಗ್ಗೆ ಆರಾಮಾಗಿ company ಬಸ್ಸಲ್ಲಿ ಹೋಗಿ, ACಲಿ ಕೂತು ಕೆಲಸ ಮಾಡೋಕೆ ನೂರ ಒಂದು ಬಾರಿ ಬೈಕೋತೀವಿ! ಅದು ಸರಿ ಇಲ್ಲ, ಸಂಬಳ ಕಮ್ಮಿ ಮಣ್ಣು ಮಸಿ ಅಂತ ಗೊಣಗ್ತೀವಿ...
ಈ ಯೋಚನೆ ಇನ್ನು ಮುಗಿದಿರಲಿಲ್ಲ.. ಅವರು ಕೈ ಮುಂದೆ ಮಾಡಿ ತಗೊಳ್ಳಿ ಅನ್ನೋ ಸೂಚನೆ ಕೊಟ್ಟರು. ಎರಡು ಎಳನೀರ ಕಾಯಿಗಳನ್ನು ಕಟ್ಟಿದ್ದರು. "ಇನ್ನೊಂದ್ ಇದಕ್ಕೆ ಕಟ್ಟಿ ಕೊಡಿ" ಅಂತ ಕೇಳ್ದೆ.
ನಗುನಗುತ್ತಲೇ, "ಮೂರು ಕಟ್ ಬಾರ್ದು ಮೇಡಂ" ಅಂದ್ರು! (ನೋಡ್ತಾ ಇದ್ದೆ ಏನೋ ಅರ್ಥ ಆಗುತ್ತೇನೋ ಅಂತ! ಅರ್ಥ ಆಗ್ಲಿಲ್ಲ.)
ವಿನಮ್ರತೆ ಇತ್ತು ಹೇಳೋವಾಗ, ನನ್ನ ಗಾಡಿ ಬಳಿ ಬಂದು, ಮೂರನೇ ಎಳನೀರನ್ನು ಇಟ್ಟರು.. ಬಿದ್ದು ಹೋಗುತ್ತೆ ಅಂತ ಒಂದನ್ನು ಮುಖಡೆ ಮಾಡಿ ಇಟ್ಟರು. ಮತ್ತೆ ಹೇಳಿದ್ರು "ಅದೂ, ಮೂರು ಕಟ್ಬಾರ್ದು.. ಅದಿಕ್ಕೆ" ....
ಕಾಸು ಕೊಟ್ಟು "ತುಂಬ thanks" ಅನ್ನೋವಾಗ, ಅವರ ಮುಗ್ಧ ನಗು ನನ್ನ ಮುಖದ ಮೇಲೆ ಬಂದಿತ್ತು!!!!
ಶ್ರದ್ಧೆ "Happy Gandhi Jayanti" ಅನ್ನೋ SMS ಗಳಲ್ಲಿ, ಹಾಡುಗಳ ಪ್ರಸಾರದಲ್ಲಿಲ್ಲ ಅಂತ ಅನ್ನಿಸ್ತು!
ನಿಜವಾದ ಏಳನೀರಿನಂತಿರುವ ಅವರ ಮನಸ್ಸು, ತಿಳಿಯಾದ ನಗು, ಗಲೀಜಿಲ್ಲದ ಕೆಲಸದ ಶ್ರದ್ಧೆ.....
ದಿನಾಗಲೂ ಇಂಥ ಇಬ್ಬರನ್ನು ನೋಡುತ್ತಾ ಇದ್ದರೆ, ಎಲ್ಲೆಲ್ಲೂ 'ಗಾಂಧೀಗಿರಿ' ಗರಿ ಬಿಚ್ಚಿ ನಾಟ್ಯವಾಡುತ್ತದೆ!!! 'ಗಾಂಧೀ' ಬಜ್ಹಾರ್, Mahatma Gandhi Road ಬರೀ ಹೆಸರಿಗೆ ಮಾತ್ರವಾಗದೆ, ನಿಜಕ್ಕೂ ಗಾಂಧೀ ತಾತನ ಆದರ್ಶಗಳು ನೆಲೆ ಮಾಡುತ್ತವೆ..
ಆದ್ರೆ, ಎಲ್ಲೆಲ್ಲೂ ಇಂಥೋರು ಇರಬೇಕಲ್ಲಾ, ಇದ್ದರೂ ಇಂಥವರನ್ನ ಗುರುತಿಸುವವರಿರಬೇಕಲ್ಲಾ.........